ತಪ್ಪನ್ನೇ ಮಾಡದ 'ಅಪರಾಧಿ'ಗಳಿಗೆ ಮುಕ್ತಿಯೇ ಇಲ್ಲವೆ?
February 6, 2018

ತಮ್ಮ ಪಾಡಿಗೆ ಕುಟುಂಬ ಸಾಕಲು ಹೆಣಗಾಡುತ್ತಾ ಬದುಕು ಸಾಗಿಸುತ್ತಿರುವ ಸಾಮಾನ್ಯ ಮನುಷ್ಯರಾದ ಹನೀಫ್ ಮತ್ತು ಸಾದಿಕ್ ಅನ್ವರ್ ಬಜ್ಪೆ ಠಾಣೆಯ ಪೊಲೀಸರ ಪ್ರಕಾರ ಕುಖ್ಯಾತ ರೌಡಿ ಶೀಟರ್ ಗಳು. ಇವರಿಬ್ಬರ ಮನೆಗೆ ಇತ್ತೀಚಿನ ವರ್ಷಗಳಲ್ಲಿ ಸದಾ ಪೊಲೀಸರು ಭೇಟಿ ನೀಡುತ್ತಾರೆ. ಕುಖ್ಯಾತ ಕ್ರಿಮಿನಲ್ ಗಳ ತರ ಠಾಣೆಗೆ ಕರೆಸಿಕೊಳ್ಳುತ್ತಾರೆ. ರೋಲ್ ಕಾಲ್, ಪೆರೇಡ್ ಮಾಡಿಸುತ್ತಾರೆ. ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಅಷ್ಟಲ್ಲದೆ ಸೆಕ್ಷನ್ 110 ಅಡಿ ಶಾಂತಿ ಭಂಗ ಕೇಸು ದಾಖಲಿಸಿ, ಕಮೀಷನರೇಟ್ ನ್ಯಾಯಾಲಯದಲ್ಲಿ ನಿಲ್ಲಿಸುತ್ತಾರೆ. ಅಲ್ಲಿ ಜಾಮೀನುದಾರರು ಬಂದು ಜಾಮೀನು, ಅಫಿದಾವತ್ ಕೊಟ್ಟರೆ ಬಿಡುಗಡೆ... ಪೊಲೀಸರ ಇಂತಹ ವರ್ತನೆಯಿಂದ ಇವರಿಬ್ಬರ ಕುಟುಂಬಗಳು ನಲುಗಿ ಹೋಗಿವೆ. ಇಂತವರನ್ನು ಪೊಲೀಸರು ರೌಡಿ ಪಟ್ಟಿಯಲ್ಲಿ ಇಟ್ಟು ಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಪೊಲೀಸರ ಶ್ರಮ, ಸಮಯ, ಸಂಪನ್ಮೂಲ ವ್ಯರ್ಥವಾಗುತ್ತದೆ. ಜನತೆಗೆ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ಹನೀಫ್ ಮತ್ತು ಅನ್ವರ್ ಮೇಲಿನ ರೌಡಿ ಶೀಟ್ ತೆರವುಗೊಳಿಸಬೇಕೆಂದು ಪೊಲೀಸ್ ಕಮಿಷನರ್'ರಲ್ಲಿ ಮನವಿ ಸಲ್ಲಿಸಿದ್ದೇವೆ.
~ ಮುನೀರ್ ಕಾಟಿಪಳ್ಳ
ಹನೀಫ್ ಮತ್ತು ಅನ್ವರ್ ಸಾದಿಕ್ ಇವರಿಬ್ಬರು ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ನಿವಾಸಿಗಳು. ಬಡತನದ ಕಾರಣದಿಂದ ಪ್ರೈಮರಿ ಹಂತದಲ್ಲೆ ಶಿಕ್ಷಣ ತೊರೆದು ಹೊಟ್ಟೆಪಾಡಿಗಾಗಿ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡವರು. ಬಟ್ಟೆ ವ್ಯಾಪಾರವೆಂದರೆ, ತಲೆಯ ಮೇಲೆ ಯಮ ಭಾರದ ಬಟ್ಟೆ ಗಂಟು ಹೊತ್ತು, ಹಳ್ಳಿಗಳಲ್ಲಿ ಹತ್ತಾರು ಕಿ ಮಿ ಮನೆ ಮನೆ ತಿರುಗಿ ವ್ಯಾಪಾರಮಾಡಿ ಅಂದಂದಿನ ಕೂಲಿ ದುಡಿಯುವುದು. ವ್ಯಾಪಾರ ಆಗದ ದಿನ ಖಾಲಿ ಹೊಟ್ಟೆಯಲ್ಲಿ ಮಲಗವುದು. ತಮ್ಮ ಹದಿನೈದರ ಹರೆಯದಲ್ಲೇ ಇಂತಹ ಕಡು ಕಷ್ಟದ ಬಟ್ಟೆ ವ್ಯಾಪಾರದಲ್ಲಿ ತೊಡಗಿದ ಇವರಿಗೆ ಈಗ ಸರಿ ಸುಮಾರು ಐವತ್ತು ವರ್ಷ. ಇವರಲ್ಲಿ ಹನೀಫ್ ಈಗಲೂ ಬಟ್ಟೆ ಗಂಟು ಹೊತ್ತು ಹಳ್ಳಿ ತಿರುಗುತ್ತಾರೆ. ತನ್ನ ಮೂರು ಹೆಣ್ಣು ಮಕ್ಕಳ ಸಹಿತ ಕುಟುಂಬವನ್ನು ಸಾಕಲು ಹೆಣಗಾಡುತ್ತಾರೆ. ಸಾದಿಕ್ ಅನ್ವರ್ ಗ್ರಾಮದಲ್ಲಿ ಸಣ್ಣ ಬಟ್ಟೆ ಅಂಗಡಿ ಇಟ್ಟಿದ್ದಾರೆ.
ಈ ರೀತಿ ತಮ್ಮ ಕುಟುಂಬ ಸಾಕಲು ಹೆಣಗಾಡುತ್ತಾ ಬದುಕು ಸಾಗಿಸುವ ಹನೀಫ್ ಮತ್ತು ಸಾದಿಕ್ ಅನ್ವರ್ ಬಜ್ಪೆ ಠಾಣೆಯ ಪೊಲೀಸರ ಪ್ರಕಾರ ಕುಖ್ಯಾತ ರೌಡಿ ಶೀಟರ್ ಗಳು. ಇವರಿಬ್ಬರ ಮನೆಗೆ ಇತ್ತೀಚಿನ ವರ್ಷಗಳಲ್ಲಿ ಸದಾ ಪೊಲೀಸರು ಭೇಟಿ ನೀಡುತ್ತಾರೆ. ಕುಖ್ಯಾತ ಕ್ರಿಮಿನಲ್ ಗಳ ತರ ಠಾಣೆಗೆ ಕರೆಸಿಕೊಳ್ಳುತ್ತಾರೆ. ರೋಲ್ ಕಾಲ್, ಪೆರೇಡ್ ಮಾಡಿಸುತ್ತಾರೆ. ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಅಷ್ಟಲ್ಲದೆ ಸೆಕ್ಷನ್ 110 ಅಡಿ ಶಾಂತಿ ಭಂಗ ಕೇಸು ದಾಖಲಿಸಿ, ಕಮೀಷನರೇಟ್ ನ್ಯಾಯಾಲಯದಲ್ಲಿ ನಿಲ್ಲಿಸುತ್ತಾರೆ. ಅಲ್ಲಿ ಜಾಮೀನುದಾರರು ಬಂದು ಜಾಮೀನು, ಅಫಿದಾವತ್ ಕೊಟ್ಟರೆ ಬಿಡುಗಡೆ... ಪೊಲೀಸರ ಇಂತಹ ವರ್ತನೆಯಿಂದ ಇವರಿಬ್ಬರ ಕುಟುಂಬಗಳು ನಲುಗಿ ಹೋಗಿವೆ.

ಇಷ್ಟಕ್ಕೆಲ್ಲ ಕಾರಣ, ಇವರ ಊರಿನ ಪಕ್ಕದ ಕೈಕಂಬದ ಪೊಳಲಿ ದ್ವಾರದ ಬಳಿ 2000 ದ ಇಸವಿಯಲ್ಲಿ ಆಟೊ ಚಾಲಕನೊಬ್ಬನ ಕೊಲೆಯಾಗಿತ್ತು. ಕೊಲೆಯಿಂದ ಉದ್ರಿಕ್ತರಾದ ಗುಂಪೊಂದು ಸ್ಥಳದಲ್ಲಿ ದಾಂಧಲೆ ನಡೆಸುತ್ತಿತ್ತು. ಅದೇ ಸಮಯ ಹನೀಫ್ ಮತ್ತು ಅನ್ವರ್ ತಮ್ಮ ವ್ಯಾಪಾರ ಮುಗಿಸಿ ಅದೇ ಜಂಕ್ಷನ್ ನಲ್ಲಿ ಬಸ್ ನಿಂದ ಇಳಿದಿದ್ದರು. ಸ್ಥಳದಲ್ಲಿ ಸೇರಿದ್ದ ಉದ್ರಿಕ್ತ ಜಂಗುಳಿಯ ನಡುವೆ ಇವರು ಸಿಲುಕಿದರು. ದಾಂಧಲೆಗೈಯ್ಯುತ್ತಿದ್ದ ಗುಂಪನ್ನು ಲಾಠಿ ಚಾರ್ಜ್ ಮೂಲಕ ಚದುರಿಸಿದ ಪೊಲೀಸರು ಕೈಗೆ ಸಿಕ್ಕವರನ್ನು ಹಿಡಿದು ಬಂಧಿಸತೊಡಗಿದರು. ಈ ಎಲ್ಲಾ ಗಲಾಟೆಯ ಅರಿವಿಲ್ಲದ ಅಮಾಯಕ ಹನೀಫ್ ಮತ್ತು ಅನ್ವರ್ ಪೊಲೀಸರ ಕೈಗೆ ಸಿಲುಕಿ ಜೈಲು ಸೇರಿದರು. ಹದಿನೈದು ದಿನದ ನಂತರ ಜಾಮೀನಿನಿಂದ ಹೊರಬಂದ ಇವರಿಗೆ ನ್ಯಾಯಾಲಯದಲ್ಲಿ ದೋಷ ಮುಕ್ತಗೊಳ್ಳಲು ಮತ್ತೆ ಮೂರು ವರ್ಷ ಬೇಕಾಯ್ತು.
ಈಗ ಅದೆಲ್ಲ ನಡೆದು 18 ವರ್ಷ ಕಳೆದಿದೆ. ಅದಕ್ಕಿಂತ ಮೊದಲಾಗಲಿ, ಆ ನಂತರವಾಗಲಿ ಇವರಿಬ್ಬರು ಯಾವುದೇ ಗಲಾಟೆಯಲ್ಲಿ ಭಾಗಿಯಾದವರಲ್ಲ. ಪೊಲೀಸು ಠಾಣೆ, ನ್ಯಾಯಾಲಯದ ಮೆಟ್ಟಲೇರಿದವರಲ್ಲ. ತಮ್ಮ ಕುಟುಂಬ ಸಾಕಲು, ಮಕ್ಕಳಿಗೆ ಶಿಕ್ಷಣ ಕೊಡಲು ದಿನವಿಡೀ ಕಷ್ಟ ಪಟ್ಟು ದುಡಿಯುವುದಕ್ಕೇ ಇವರಿಗೆ ಸಮಯ ಸಾಲುವುದಿಲ್ಲ. ಹದಿನೆಂಟು ವರ್ಷಗಳ ಹಿಂದಿನ ಕಹಿ ಘಟನೆಗಳನ್ನು ಮರೆತು, ಬದುಕು ಕಟ್ಟುವ ಯತ್ನದಲ್ಲಿರುವ ಇವರ ಪಾಲಿಗೆ ಈಗ ಎರಡು ವರ್ಷಗಳಿಂದ ಪೊಲೀಸರು ತೆರೆದಿರುವ ರೌಡಿ ಪಟ್ಟಿ ಕಂಟಕವಾಗಿ ಕಾಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನಲ್ಲಿ ಹೆಚ್ಚುತ್ತಿರುವ ಕೋಮು ಸಂಘರ್ಷ, ಭೂಗತ ಚಟುವಟಿಕೆ, ಗ್ಯಾಂಗ್ ವಾರ್ ಮಟ್ಟ ಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳು ಕಂಡುಕೊಂಡಿರುವ ಕೆಲವು ಕ್ರಮಗಳಲ್ಲಿ, ನಿರಂತರವಾಗಿ ಶಾಂತಿ ಕದಡುವ ವ್ಯಕ್ತಿಗಳು, ಕ್ರಿಮಿನಲ್ ಗಳು, ರೌಡಿಗಳ ಮೇಲೆ ರೌಡಿ ಶೀಟ್ ತೆರೆಯುವುದು. ಆ ಮೂಲಕ ಅವರ ಚಲನವಲನಗಳ ಮೇಲೆ ನಿಗಾ ಇಟ್ಟು ಹದ್ದು ಬಸ್ತಿಗೆ ತರುವುದು. ಈ ರೀತಿ ಪಟ್ಟಿ ತಯಾರಿಸುವಾಗ ಹನೀಫ್ ಮತ್ಗು ಅನ್ವರ್ ರಂತಹ ಹಲವು ಅಮಾಯಕರನ್ನು ಕೆಲ ಹಂತದ ಪೊಲೀಸರು ರೌಡಿ ಪಟ್ಟಿಗೆ ಸೇರಿಸಿದ್ದಾರೆ. ಕೆಲವೆಡೆ ಯಾವುದೋ ಉದ್ವೇಗದಲ್ಲಿ, ಕುಟುಂಬ ಕಲಹದಲ್ಲಿ ಪೊಲೀಸ್ ಕೇಸು ಹಾಕಿಸಿಕೊಂಡ ಸಭ್ಯರೂ ಈ ಪಟ್ಟಿಯಲ್ಲಿದ್ದಾರೆ. ಇನ್ನು ಹತ್ತಿಪ್ಪತ್ತು ವರ್ಷಗಳ ಹಿಂದೆ ರೌಡಿ ಪಟ್ಡಿಯಲ್ಲಿದ್ದವರು, ಈಗ ಮಕ್ಕಳು, ಮೊಮ್ಮಕ್ಕಳೊಂದಿಗೆ ಎಲ್ಲೋ ತಮ್ಮಷ್ಟಕ್ಕೆ ಬದುಕುವವರನ್ನೂ ಪೊಲೀಸರು ಇನ್ನೂ ರೌಡಿ ಪಟ್ಟಿಯಲ್ಲಿ ಉಳಿಸಿಕೊಂಡು ಅವರನ್ನು ನಿರಂತರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಿದ್ದಾರೆ.. ಇದು ಇವರ ನೆಮ್ಮದಿಯ ಬದುಕಿಗೆ ಮಾತ್ರವಲ್ಲದೆ ಅವರ ಕುಟುಂಬದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪರಿಹಾರಕ್ಕೆ ಪ್ರಯತ್ನ
ಇಂತವರನ್ನು ಪೊಲೀಸರು ರೌಡಿ ಪಟ್ಟಿಯಲ್ಲಿ ಇಟ್ಟು ಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಪೊಲೀಸರ ಶ್ರಮ, ಸಮಯ, ಸಂಪನ್ಮೂಲ ವ್ಯರ್ಥವಾಗುತ್ತದೆ. ಜನತೆಗೆ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ಹನೀಫ್ ಮತ್ತು ಅನ್ವರ್ ಮೇಲಿನ ರೌಡಿ ಶೀಟ್ ತೆರವುಗೊಳಿಸಬೇಕು, ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ರೌಡಿ ಶೀಟರ್ ಗಳ ಪಟ್ಟಿಯನ್ನು ಮರು ಪರಿಶೀಲನೆ ನಡೆಸಿ ಈಗ ಯಾವುದೇ ರೌಡಿ ಚಟುವಟಿಕೆಗಳಲ್ಲಿ ಇಲ್ಲದವರನ್ನು ಪಟ್ಟಿಯಿಂದ ಕೈ ಬಿಟ್ಟು ನ್ಯಾಯ ಒದಗಿಸಿಕೊಡಬೇಕು ಎಂದು ಮಂಗಳೂರು ಪೊಲೀಸ್ ಕಮೀಷನರ್ ಅವರಲ್ಲಿ dyfi ವತಿಯಿಂದ ಮನವಿ ಮಾಡಿಕೊಂಡಿದ್ದೇವೆ. ಮಾನವೀಯ ಸ್ಪಂದನೆ ಇಟ್ಟುಕೊಂಡು ಕರ್ತವ್ಯ ನಿರ್ವಹಿಸುವ ಕಮೀಷನರ್ ಸುರೇಶ್ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ರೌಡಿ ಪಟ್ಟಿಯನ್ನು ಮರು ಪರಿಶೀಲಿಸುವುದಾಗಿ ಹೇಳಿದ್ದಾರೆ.
May 1, 2019
March 22, 2019
March 19, 2019
