ಕಾರ್ಮಿಕರ ದಿನಾಚರಣೆ ಮತ್ತಷ್ಟು ಪ್ರಸ್ತುತ
May 1, 2016
ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆ ತರುವ ಮೂಲಕ ಕಾರ್ಮಿಕರ ಜೀವನವನ್ನು ಮತ್ತಷ್ಟು ಕತ್ತಲಿಗೆ ದೂಡಲು ಹೊರಟಿದೆ. ಕಾರ್ಪೊರೇಟ್ ಸ್ನೇಹಿ ಪ್ರಧಾನಿ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಬಂಡವಾಳಷಾಹಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಹೀಗಾಗಿ ಇಂಡಿಯಾದಲ್ಲಿ ಈ ಬಾರಿಯ ಮೇ ಡೇ ಮತ್ತಷ್ಟು ಅಗ್ರೆಸ್ಸಿವ್ ಆಗಿ ಆಚರಿಸಬೇಕಾದ ದಿನ.

ಮೇ 1 ಈ ಸಲ ರಜಾದಿನವಾದ ಭಾನುವಾರವೇ ಬಂದಿರೋದು ವೈಟ್ ಕಾಲರಿನ ಬಹಳ ಜನಕ್ಕೆ ಬೇಜಾರಿನ ವಿಷಯ. ಮತ್ತೆ ಕೆಲವರಿಗೆ ಅಂಥ ವ್ಯತ್ಯಾಸವೇನಿಲ್ಲ. ಯಾಕೆಂದರೆ ಕೆಲವು ಸಂಸ್ಥೆಗಳು ಮೇ 1ರ ರಜಾದಿನವನ್ನು ತೆಗೆದುಹಾಕಿವೆ. ದಿನಕ್ಕೆ ಎಂಟು ಗಂಟೆಗಿಂತಲೂ ಹೆಚ್ಚು ಕಾಲ ದುಡಿಯುವ, ತಮ್ಮ ಸಮಯ ಹಾಗೂ ದುಡಿಮೆಗೆ ಎಷ್ಟು ವಾಸ್ತವದಲ್ಲಿ ಸಿಗಬೇಕಿರುವ ವೇತನ ಎಷ್ಟು ಅನ್ನುವ ಅರಿವೂ ಇಲ್ಲದ ಕೆಲವರು ‘ಕಾರ್ಮಿಕರ ದಿನ’ದ ಆಚರಣೆ ವ್ಯರ್ಥ ಕಲಾಪ ಅನ್ನುವ ಹರಟೆಗೆ ತೊಡಗುವುದೂ ಉಂಟು. ವಾಸ್ತವದಲ್ಲಿ, ಕಾರ್ಮಿಕ ದಿನಾಚರಣೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಅನ್ನುವುದನ್ನು ಅವರು ಅರಿತಿಲ್ಲ. ಉದ್ಯೋಗ ಸಿಗುವುದೇ ಬಹಳ ದೊಡ್ಡ ಪವಾಡ ಅಂದುಕೊಂಡು ದುಡಿಮೆಯ ನೊಗ ಹೊತ್ತ ಈ ಮಂದಿಯಲ್ಲಿ ಬಹುತೇಕರು ಕಾರ್ಮಿಕರ ಹಕ್ಕು – ಕಾನೂನುಗಳ ಬಗ್ಗೆ ಮಾತಾಡಲೂ ಹಿಂಜರಿಯುತ್ತಾರೆ. ಅಷ್ಟರಮಟ್ಟಿನ ಭಯದಲ್ಲಿ ಅವರನ್ನು ಇಡಲಾಗಿದೆ.
ಅಧ್ಯಯನ ವರದಿಗಳ ಪ್ರಕಾರ ಭಾರತದಲ್ಲಿ ಶೇ.90ರಷ್ಟು ಕಾರ್ಮಿಕರು ಅನೌಪಚಾರಿಕ ಕರ್ಮಚಾರಿಗಳಾಗಿದ್ದು, ಇವರು ಕಾರ್ಮಿಕರ ಕಾನೂನುಗಳ ವ್ಯಾಪ್ತಿಗೆ ಬರುವುದೇ ಇಲ್ಲ. ಹೆಚ್ಚುಕಡಿಮೆ ಜೀತದ ದುಡಿಮೆ ಇವರದ್ದು. ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆ ತರುವ ಮೂಲಕ ಕಾರ್ಮಿಕರ ಜೀವನವನ್ನು ಮತ್ತಷ್ಟು ಕತ್ತಲಿಗೆ ದೂಡಲು ಹೊರಟಿದೆ. ಕಾರ್ಪೊರೇಟ್ ಸ್ನೇಹಿ ಪ್ರಧಾನಿ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಬಂಡವಾಳಷಾಹಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಹೀಗಾಗಿ ಇಂಡಿಯಾದಲ್ಲಿ ಈ ಬಾರಿಯ ಮೇ ಡೇ ಮತ್ತಷ್ಟು ಅಗ್ರೆಸ್ಸಿವ್ ಆಗಿ ಆಚರಿಸಬೇಕಾದ ದಿನ. ಈ ದಿನ ಕಾರ್ಮಿಕ ಸಂಘಟನೆಗಳು, ಕೇಂದ್ರ ಸರ್ಕಾರ ಕಾರ್ಮಿಕರ ಕಾನೂನಿನಲ್ಲಿ ತರಲಿರುವ ಸುಧಾರಣೆಗಳನ್ನು ಮತ್ತಷ್ಟು ಪ್ರಬಲವಾಗಿ ವಿರೋಧಿಸುವ ಸಂಕಲ್ಪ ತೊಡಬೇಕಾದ ದಿನ.
ಮೋದಿ ಅಧಿಕಾರಕ್ಕೆ ಬಂದ ತಿಂಗಳೊಪ್ಪತ್ತಿನಲ್ಲೇ ಕಾರ್ಮಿಕ ಕಾನೂನುಗಳ ಸುಧಾರಣೆಯ ಸುತ್ತೋಲೆ ಹೊರಡಿಸಿದ್ದರು. ಇದನ್ನು ವಿರೋಧಿಸಿ ಈತನಕ ಹಲವು ಪ್ರತಿಭಟನೆಗಳು ನಡೆದಿವೆಯಾದರೂ ಪ್ರಧಾನಿಗೆ ಅದರ ಬಿಸಿ ತಟ್ಟಿಲ್ಲ. ಜೊತೆಗೆ, ಕಾರ್ಮಿಕರು ಅಂದರೆ ಮೂರನೇ ದರ್ಜೆ ಹಾಗೂ ದರ್ಜೆಯೇ ಇಲ್ಲದ ನೌಕರರು ಅಥವಾ ಫ್ಯಾಕ್ಟರಿ ನೌಕರರು ಅಂತ ಅಂದುಕೊಂಡಿರುವವರೇ ಹೆಚ್ಚಿದ್ದಾರೆ. ಆದ್ದರಿಂದ ವೈಟ್ ಕಾಲರಿನವರು, ಮಧ್ಯಮ ವರ್ಗದವರು ಹಾಗೂ ಇತರ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅದರಿಂದ ಆಗಬಹುದಾದ ಅನರ್ಥಗಳ ಅರಿವೇ ಆಗುತ್ತಿಲ್ಲ.
ಏನಿದು ಲೇಬರ್ ಕೋಡ್?
ಬಿಜೆಪಿ ಅಧಿಕಾರ ವಹಿಸಿಕೊಂಡಿದ್ದು ದಿನಾಂಕ ೨೬-೫-೨೦೧೪ ರಂದು. ಕೇವಲ ೧೦ ದಿನಗಳಲ್ಲಿ ನರೇಂದ್ರ ಮೋದಿ ಸರಕಾರವು ಅಂದರೆ, ದಿನಾಂಕ ೬-೬-೨೦೧೪ ರಂದು ಕಾರ್ಖಾನೆಗಳ ಕಾನೂನು ಒಳಗೊಂಡಂತೆ ವಿವಿಧ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವುದಾಗಿ ಅಧಿಸೂಚನೆಯನ್ನು ಸರಕಾರದ ವೆಬ್ಸೈಟ್ನಲ್ಲಿ ಕರಡನ್ನು ಪ್ರಕಟಿಸಿತು. ಹಾಗೆ ಆರಂಭವಾದ ನರೇಂದ್ರ ಮೋದಿ ಸರಕಾರದ ಆಡಳಿತ ವೈಖರಿಯು ಹಲವು ಸುಗ್ರೀವಾಜ್ಞೆಗಳನ್ನು ಕಲ್ಲಿದ್ದಲು ಕೈಗಾರಿಕೆಯ ಷೇರು ಮಾರಾಟ ಮಾಡಲು (ಖಾಸಗೀಕರಿಸಲು), ಹಲವು ರಂಗಗಳಲ್ಲಿ ವಿದೇಶಿ ಬಂಡವಾಳವನ್ನು ರಕ್ಷಣಾ ವಲಯ ಒಳಗೊಂಡಂತೆ ವಿಮಾ, ಚಿಲ್ಲರೆ ವ್ಯಾಪಾರದ ಬಹುಬ್ರಾಂಡ್ಗಳಲ್ಲಿ, ಮುಂತಾಗಿ ಅವಕಾಶ ನೀಡಲು ಅಧಿಸೂಚನೆಗಳನ್ನು ಹೊರಡಿಸಿತು. ಇದರ ಮುಂದುವರೆದ ಭಾಗವಾಗಿ ದಿನಾಂಕ ೨-೩-೨೦೧೫ ರಂದು ಲೇಬರ್ ಕೋಡ್ ಆನ್ ವೇಜೆಸ್ (ವೇತನಗಳಿಗೆ ಸಂಬಂಧಿಸಿದ ಸಂಹಿತೆ) ಹೆಸರಲ್ಲಿ ಕರಡನ್ನು ಪ್ರಕಟಿಸಿತು. ಈ ಲೇಬರ್ ಕೋಡ್ ಮುಖ್ಯ ಉದ್ದೇಶವು ಹಾಲಿ ಜಾರಿಯಲ್ಲಿರುವ ಕನಿಷ್ಟ ವೇತನ ಕಾನೂನು ೧೯೪೮, ವೇತನ ಪಾವತಿ ಕಾನೂನು, ಬೋನಸ್ ಪಾವತಿ ಕಾನೂನು ಮತ್ತು ಸಮಾನ ವೇತನ ಕಾನೂನುಗಳನ್ನು ರದ್ದುಗೊಳಿಸುವುದಾಗಿದೆ. ಅವುಗಳ ಬದಲಾಗಿ ಲೇಬರ್ ಕೋಡ್ ಆನ್ ವೇಜೆಸ್ ಪಾರ್ಲಿಮೆಂಟಲ್ಲಿ ಅಂಗೀಕರಿಸುವುದಾಗಿದೆ.
ಗಾರ್ಮೆಂಟ್ ಕಾರ್ಮಿಕರ ಮಾದರಿ
ಇತ್ತೀಚೆಗೆ ಬೆಂಗಳೂರಿನ ಗಾರ್ಮೆಂಟ್ ನೌಕರರು, ಅದರಲ್ಲೂ ಮಹಿಳೆಯರು ಪ್ರಾವಿಡೆಂಟ್ ಫಂಡ್ ನೀತಿಯಲ್ಲಿ ತಿದ್ದುಪಡಿ ಮಾಡಿದ್ದನ್ನುವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಹೀಗೆ ಬೀದಿಗಿಳಿದಿದ್ದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು. ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ತಿದ್ದಲು ಹೊರಟಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಕಾರ್ಮಿಕರು ಒಟ್ಟಾಗಿ ಅಂಥದೇ ಹೋರಾಟ ರೂಪಿಸುವ ಅಗತ್ಯವಿದೆ ಅನ್ನುವುದು ಚಿಂತಕರ ಚಾವಡಿಯಲ್ಲಿ ಕೇಳಿಬರುತ್ತಿರುವ ಮಾತು.
(ಪೂರಕ ಮಾಹಿತಿ : ಜಿ.ಎನ್.ನಾಗರಾಜ್)
May 1, 2019
March 22, 2019
March 19, 2019
